
ಸಾವಿರಾರು ಕೋಟಿ ರೂ. ವೆಚ್ಚದಲ್ಲಿ ಬೃಹತ್ ಕೆರೆ ತುಂಬಿಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ಈಗಾಗಲೇ ನೀಡಿದ್ದಾರೆ. ಈ ಯೋಜನೆಯಡಿ ಕರ್ನಾಟಕದಾದ್ಯಂತ ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು ರಾಜ್ಯದಾದ್ಯಂತ ಅನೇಕ ಕಡೆಗಳಲ್ಲಿ ಈ ಯೋಜನೆ ಯಶಸ್ವಿಯಾಗಿದೆ. ಇದರಿಂದ ರೈತರಿಗೆ ಹೊಸ ಆಶಾಕಿರಣ ಮೂಡಿದೆ. ಎಲ್ಲೆಡೆಯೂ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳು ಚುರುಕುಗೊಂಡಿದು, ಕೆಲವು ಕಡೆ ಯಶಸ್ವಿಯಾಗಿ ಕೆರೆಗಳಿಗೆ ನೀರು ಹರಿಸಲಾಗುತ್ತಿದೆ. ಈ ಯೋಜನೆಯು ಜನರ ಜಲಬವಣೆ ನೀಗಿಸುವ ಉದ್ದೇಶವಾಗಿದೆ. ಅಂತೆಯೇ ಅಂತರ್ಜಲ ಮಟ್ಟ ಹೆಚ್ಚಿಸಲು ಬೋರ್ವೆಲ್ಗಳಿಗೆ ನೀರು ತುಂಬಿಸುವ ಹೊಸ ಯೋಜನೆಗೆ ಸಹ ಅನುದಾನ ನೀಡುವುದಾಗಿ ಸರ್ಕಾರ ಭರವಸೆ ನೀಡಿದೆ. ಆದರೆ ಕೆಲವು ಭಾಗಗಳಲ್ಲಿ ನೀರೆತ್ತುವ ಮೋಟಾರ್, ಕೆಟ್ಟು ಹೋಗಿ ಕೆರೆ ತುಂಬುವ ಯೋಜನೆಗೆ ಅಡಚಣೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿರುತ್ತಾರಾದರೂ ವಾಸ್ತವದ ಸಂಗತಿ ಬೇರೆಯೇ ಇರಬಹುದು. ಸರ್ಕಾರ ಇತ್ತ ಒಮ್ಮೆ ಕಣ್ಣು ಹಾಯಿಸಿದರೆ ಸತ್ಯಾಂಶ ತಿಳಿಯಲ – ಹೆಚ್ಚಿನ ಸಮಯದ ಅವಶ್ಯಕತೆ ಇರುವುದಿಲ್ಲ. ಸರ್ಕಾರವು ರಾಜ್ಯಾದ್ಯಂತ ಬರಗಾಲವನ್ನು ತಡೆಗಟ್ಟಲು ಮತ್ತು ಅಂತರ್ಜಲ ಹೆಚ್ಚಿಸಲು ಏತ ನೀರಾವರಿ ಮೂಲಕ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಆದರೆ ಈ ಯೋಜನೆಯು ಸಮರ್ಪಕವಾಗಿ ಜಾರಿಯಾಗುತ್ತಿದೆಯೇ ಎಂಬ ಗುಮಾನಿ ಜನರಲ್ಲಿ ಈಗಾಗಲೇ ಕಾಡುತ್ತಿದೆ. ಈಗಾಗಲೇ ಬೇಸಿಗೆಕಾಲ ಮನುಷ್ಯರನ್ನು ಹೈರಾಣಾಗಿಸಿದ್ದು, ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಹಾಹಾಕಾರವಿದೆ

ಹೀಗಾಗಿ ನೀರಿನ ಕೊರತೆಯಾಗಬಾರದೆಂದು ಸರ್ಕಾರ ಯೋಜನೆಗಳನ್ನು ಜಾರಿಗೊಳಿಸಿದ್ದರೂ ಅಧಿಕಾರಿಗಳು ಎಷ್ಟರಮಟ್ಟಿಗೆ ಯಶಸ್ವಿಗೊಳಿಸುತ್ತಿದ್ದಾರೆ ಎಂಬುದು ಪ್ರಶ್ನಾರ್ಹವಾಗಿದೆ. ಅನೇಕ ಕಡೆ ಏತನೀರಾವರಿಗೆ ಸುಮಾರು ವರ್ಷಗಳಿಂದ ಚಾಲನೆ ನೀಡಿಲ್ಲ ಅನೇಕ ಹಳ್ಳಿಗಳಲ್ಲಿ ಬೋರ್ವೆಲ್ನ ನೀರು ಬತ್ತಿದೆ. ಇದಕ್ಕಾಗಿ ಜನರು ಮನವಿ ಮಾಡಿದ್ದರೂ, ಕೋಟಿ ಕೋಟಿ ಅನುದಾನ ಸರ್ಕಾರ ನೀಡಿದ್ದರೂ ಯಾವುದೇ ತೆರನಾದ ಕಾರ್ಯಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಇದಕ್ಕೆಲ್ಲ ಏನು ಕಾರಣವೆಂಬುದು ಕಂಡುಕೊಳ್ಳಬೇಕಿದೆ.









